ಆಷಾಢ ಮಾಸದ ಮೊದಲ ಶುಕ್ರವಾರ ದೇವಾಲಯಗಳಿಗೆ ಹರಿದು ಬಂತು ಭಕ್ತಸಾಗರ

ಬೆಂಗಳೂರು: ಆಷಾಢ ಮಾಸದ ಮೊದಲ ಶುಕ್ರವಾರದ ಹಿನ್ನೆಲೆಯಲ್ಲಿ ನಗರದ ಪ್ರತಿಷ್ಠಿತ ಬನಶಂಕರಿ ದೇವಾಲಯಕ್ಕೆ ಬರೋಬ್ಬರಿ 10 ಸಾವಿರ ಮಂದಿ ಆಗಮಿಸಿದ್ದರು. ವಿಶೇಷ ಕೌಂಟರ್‌ನಲ್ಲೇ ಮೂರು ಸಾವಿರ ಮಂದಿ ಟಿಕೆಟ್‌ ಪಡೆದಿದ್ದರು. ಅಷ್ಟೇ ಅಲ್ಲದೆ, ರಾಜರಾಜೇಶ್ವರಿ ದೇವಾಲಯ ಸೇರಿದಂತೆ ದೇವಿ ದೇವಾಲಯಗಳಿಗೆ ಭಕ್ತರ ದಂಡೇ ಹರಿದು ಬಂದಿತು

ಕಳೆದ ಎರಡು ವರ್ಷವೂ ಕೋವಿಡ್‌ ಹಿನ್ನೆಲೆಯಲ್ಲಿ ದೇವಾಲಯಗಳಲ್ಲಿ ದರ್ಶನಕ್ಕೆ ಮತ್ತು ವಿಶೇಷ ಪೂಜಾ ಕೈಂಕರ್ಯಗಳಿಗೆ ಮುಕ್ತ ಅವಕಾಶ ಇರಲಿಲ್ಲ. ಎರಡು ವರ್ಷಗಳ ಬಳಿಕ ಇದೀಗ ದೇವಾಲಯಗಳಿಗೆ ಭಕ್ತರು ಭಕ್ತಿ, ಸಂತಸದಿಂದ ತೆರಳಿದ್ದರು.

ಬೆಳಗ್ಗೆ ಬೆಂಗಳೂರು ಬನಶಂಕರಿ ದೇವಿಗೆ ಅಭಿಷೇಕ, ವಿಶೇಷ ಹೂವಿನ ಅಲಂಕಾರ ಹಾಗೂ ಪ್ರಾಕಾರೋತ್ಸವ ನಡೆಸಿ ನಂತರ ಮಹಾಮಂಗಳಾರತಿ ನೆರವೇರಿಸಲಾಯಿತು. ಇದೇ ವೇಳೆ ಅಮ್ಮನ ಗರ್ಭಗುಡಿ ಪಕ್ಕದಲ್ಲಿರುವ ಶಾಕಾಂಬರಿ ದೇವಿ, ದುರ್ಗಾ ಪರಮೇಶ್ವರಿ ಹಾಗೂ ಚೌಡೇಶ್ವರಿ ಉತ್ಸವ ಮೂರ್ತಿಗಳಿಗೂ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ದೇವಾಲಯದಲ್ಲಿ ಬೆಳಗ್ಗೆ ಹಾಗೂ ಸಂಜೆ ವಿಶೇಷ ಪೂಜೆ, ಮಹಾಮಂಗಳಾರತಿ ನೆರವೇರಿಸಲಾಯಿತು. ಎಂದಿನಂತೆ ದೇವಾಲಯದ ಆವರಣದಲ್ಲಿ ಮಧ್ಯಾಹ್ನ ಅನ್ನದಾಸೋಹ ನಡೆಯಿತು ಎಂದು ಬನಶಂಕರಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಕೆ. ಪದ್ಮಾ ‘ವಿಜಯ ಕರ್ನಾಟಕ’ಕ್ಕೆ ತಿಳಿಸಿದರು.

ಆಷಾಢ ಮಾಸವೆಂದರೆ ದೇವಿ ದೇವಾಲಯಗಳಲ್ಲಿ ಜನ ಕಿಕ್ಕಿರಿದು ಸೇರುವರು. ಭಕ್ತರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಬ್ಯಾರಿಕೇಡ್‌ಗಳನ್ನು ಹಾಕಿ, ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿ ಸೂಕ್ತ ವ್ಯವಸ್ಥೆ ಮಾಡಲಾಗಿತ್ತು ಎಂದು ಪದ್ಮಾ ತಿಳಿಸಿದರು.

ಇತರ ದೇವಾಲಯಗಳಲ್ಲೂ ಜನಸಂದಣಿ

ರಾಜರಾಜೇಶ್ವರಿನಗರದ ರಾಜರಾಜೇಶ್ವರಿ ದೇವಸ್ಥಾನದಲ್ಲಿಆಷಾಢ ಶುಕ್ರವಾರದ ಅಂಗವಾಗಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ದೇವಾಲಯದ ಒಳಾಂಗಣ ಮತ್ತು ಗರ್ಭಗುಡಿಯಲ್ಲಿ ದೀಪಗಳ ಬೆಳಕಿನಲ್ಲಿಯೇ ದೇವಿಯನ್ನು ಕಣ್ತುಂಬಿಕೊಳ್ಳುವುದು ವಿಶೇಷ. ಜಯನಗರದ ದುರ್ಗಾ ಪರಮೇಶ್ವರಿ, ಮಲ್ಲೇಶ್ವರಂನ ಸರ್ಕಲ್‌ ಮಾರಮ್ಮ, ಚಿನ್ನಯ್ಯನಪಾಳ್ಯದ ಮಾರಮ್ಮ ದೇವಾಲಯ, ಕನಕಪುರ ರಸ್ತೆಯ ಗಂಗಮ್ಮ ದೇವಿ, ಹೆಬ್ಬಾಳದ ಮಾರಿಯಮ್ಮ, ಪಿಳೇಕಮ್ಮ ದೇವಸ್ಥಾನಗಳಲ್ಲಿ ದೇವಿಯರಿಗೆ ವಿಶೇಷ ಅಲಂಕಾರ ಮತ್ತು ಪೂಜೆ ನೆರವೇರಿಸಲಾಯಿತು. ಭಕ್ತರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *