ಅತಿವೃಷ್ಟಿ ಪರಿಹಾರದಲ್ಲಿ ಕರ್ನಾಟಕಕ್ಕೆ ಹೆಚ್ಚುವರಿ 492 ಕೋಟಿ ರೂ. ಬಿಡುಗಡೆ

​​ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಉನ್ನತ ಮಟ್ಟದ ಸಭೆಯು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಕರ್ನಾಟಕ ಸೇರಿ 5 ರಾಜ್ಯಗಳಿಗೆ ಹೆಚ್ಚುವರಿ ಪರಿಹಾರವಾಗಿ 1,682 ಕೋಟಿ ರೂ. ಬಿಡುಗಡೆ ಮಾಡಲು ಒಪ್ಪಿಗೆ ಸೂಚಿಸಿದೆ.

ಹೊಸದಿಲ್ಲಿ: ರಾಜ್ಯದಲ್ಲಿ ಕಳೆದ ವರ್ಷ ಸಂಭವಿಸಿದ ಭೀಕರ ಅತಿವೃಷ್ಟಿ ಮತ್ತು ಭೂ ಕುಸಿತ ಸಂಬಂಧ ಹೆಚ್ಚುವರಿ ಪರಿಹಾರವಾಗಿ ಕೇಂದ್ರ ಸರಕಾರವು ಕರ್ನಾಟಕಕ್ಕೆ 492.39 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಲು ಗುರುವಾರ ಒಪ್ಪಿಗೆ ನೀಡಿದೆ.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಉನ್ನತ ಮಟ್ಟದ ಸಭೆಯು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್‌)ಯಿಂದ ಕರ್ನಾಟಕ ಸೇರಿ ಐದು ರಾಜ್ಯಗಳಿಗೆ ಹೆಚ್ಚುವರಿ ಪರಿಹಾರವಾಗಿ 1,682 ಕೋಟಿ ರೂ. ಬಿಡುಗಡೆ ಮಾಡಲು ಒಪ್ಪಿಗೆಯನ್ನು ಸೂಚಿಸಿದೆ. ಇದರಲ್ಲಿ ಕರ್ನಾಟಕಕ್ಕೂ ಪರಿಹಾರದ ಹಣ ಬಿಡುಗಡೆಯಾಗಿದೆ.

ರಾಜ್ಯವಾರು ಪರಿಹಾರದ ಮೊತ್ತವನ್ನು ನೋಡುವುದಾದರೆ ಮಹಾರಾಷ್ಟ್ರಕ್ಕೆ 355.39 ಕೋಟಿ ರೂ. ಹಣವನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿದೆ. ತಮಿಳುನಾಡಿಗೆ 352.85 ಕೋಟಿ ರೂ., ಆಂಧ್ರ ಪ್ರದೇಶಕ್ಕೆ 351.43 ಕೋಟಿ ರೂ., ಹಿಮಾಚಲ ಪ್ರದೇಶಕ್ಕೆ 112.19 ಕೋಟಿ ರೂ. ಹಾಗೂ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಗೆ 17.86 ಕೋಟಿ ರೂ. ಹೆಚ್ಚುವರಿ ಪರಿಹಾರವನ್ನು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್‌)ಯಿಂದ ಬಿಡುಗಡೆ ಮಾಡಲಾಗಿದೆ. ರಾಜ್ಯ ವಿಪತ್ತು ಪರಿಹಾರ ನಿಧಿ (ಎಸ್‌ಡಿಆರ್‌ಎಫ್‌)ಗೆ ಈಗಾಗಲೇ ಬಿಡುಗಡೆ ಮಾಡಿರುವೆ ಮೊತ್ತಕ್ಕೆ ಹೆಚ್ಚುವರಿಯಾಗಿ ಈ ಮೊತ್ತವನ್ನು ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರ ಸರಕಾರವು ಸ್ಪಷ್ಟಪಡಿಸಿದೆ.

ಕೇಂದ್ರವು 2021 – 22ನೇ ಸಾಲಿನಲ್ಲಿ 28 ರಾಜ್ಯಗಳ ಎಸ್‌ಡಿಆರ್‌ಎಫ್‌ಗೆ 17,747.20 ಕೋಟಿ ರೂ. ಹಾಗೂ ಹೆಚ್ಚುವರಿಯಾಗಿ ಎಂಟು ರಾಜ್ಯಗಳಿಗೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ 4,645.92 ಕೋಟಿ ರೂ. ಬಿಡುಗಡೆ ಮಾಡಿದೆ.

Leave a Reply

Your email address will not be published. Required fields are marked *